ಯಕ್ಷಗಾನ ಕಲಾವಿದ ಮಾರ್ಗೋಳಿಗೆ ಕೆ.ಎಸ್. ನಿಡಂಬೂರು ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಏಪ್ರಿಲ್ 13 , 2015
|
ಎಪ್ರಿಲ್ 13, 2015
|
ಯಕ್ಷಗಾನ ಕಲಾವಿದ ಮಾರ್ಗೋಳಿಗೆ ಕೆ.ಎಸ್. ನಿಡಂಬೂರು ಪ್ರಶಸ್ತಿ ಪ್ರದಾನ
ಮಲ್ಪೆ :
ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಕೆ.ಎಸ್. ನಿಡಂಬೂರು ಅವರ ಪುತ್ರ ಎಚ್. ಸುದರ್ಶನ್ ಪ್ರತಿವರ್ಷ ಕೊಡಮಾಡುವ ಕೆ.ಎಸ್. ನಿಡಂಬೂರು ಪ್ರಶಸ್ತಿಯನ್ನು ಈ ಭಾರಿ ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀವೇಷಧಾರಿ 90ರ ಹರೆಯದ ಮಾರ್ಗೋಳಿ ಗೋವಿಂದ ಶೇರಿಗಾರ್ ಅವರಿಗೆ ನೀಡಲಾಯಿತು.
ಶನಿವಾರ ಕಡೆಕಾರ್ ಕಿದಿಯೂರು ಶ್ರೀ ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿಯ 51ನೇ ವಾರ್ಷಿಕ ಸಮಾರಂಭದ ವೇದಿಕೆಯಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಕ್ಷಪ್ರೇಮಿ ಧರ್ಮರಾಯ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾರ್ಗೋಳಿ ಅವರು, ನಿಡಂಬೂರು ಯಕ್ಷಪ್ರೇಮಿ ಧರ್ಮರಾಯ. 50ರ ದಶಕದಲ್ಲಿ ಮುಂಬಯಿಯಲ್ಲಿ ಯಾವುದೇ ಕನ್ನಡ, ತುಳು ಸಂಘಟನೆಗಳು ಇರಲಿಲ್ಲ. ಆಗ ಮುಂಬಯಿಗೆ ಹೋದರೆ ಅಲ್ಲಿ ಕೇಳುವವರು ಯಾರೂ ಇರಲಿಲ್ಲ. ಕನ್ನಡ ಮಾತನಾಡುವವರು ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಡಂಬೂರು ಅವರು ತನಗೆ ತಿಂಗಳುಗಟ್ಟಲೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಹೊಟ್ಟೆ ತುಂಬಾ ಅನ್ನ ನೀಡಿದ ಧರ್ಮರಾಯ ಅವರು. ಅಂದು ಸಂಗ್ರಹಿಸಿದ ಸಂಪತ್ತು ಇಂದು ಅವರ ಪುತ್ರನಿಂದ ನನಗೆ ದೊರೆತಿರುವುದು ನನ್ನ ಭಾಗ್ಯ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಉಡುಪಿ ಸಿರಿತುಳು ಚಾವಡಿಯ ಅಧ್ಯಕ್ಷ ಕುದಿ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹೊಟೇಲ್ ಕಿದಿಯೂರು ಪ್ರೈವೇಟ್ ಲಿ. ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಯಕ್ಷಗಾನ ಕಲಾಮಂಡಳಿಯ ಸುವರ್ಣ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್. ಸುದರ್ಶನ್ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ್ ಕಿದಿಯೂರು ಅವರನ್ನು ಕಲಾ ಮಂಡಳಿ ವತಿಯಿಂದ ಸಮ್ಮಾನಿಸಲಾಯಿತು.
ಶಾಸಕ ಪ್ರಮೋದ್ ಮಧ್ವರಾಜ್, ಸೂರ್ಯಪ್ರಕಾಶ್, ಬೆಂಗಳೂರು ವಿಕ್ರಾಂತ್ ಇಲೆಕ್ಟ್ರಿಕಲ್ನ ರಮೇಶ್ ಎನ್. ಸುವರ್ಣ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತ ತೋನ್ಸೆ ಜಯಂತ್ ಕುಮಾರ್, ಯಕ್ಷಗಾನ ಕಲಾಮಂಡಳಿ ಗೌರವಾಧ್ಯಕ್ಷ ಜಯಶೀಲ ಕಿದಿಯೂರು, ಕಂದಾಯ ಅಧಿಕಾರಿ ಕುಪ್ಪಯ್ಯ ಮೊದಲಾದವರು ಉಪಸ್ಥಿತರಿದ್ದರು.
ಗುಂಡು ಬಿ. ಅಮೀನ್ ಸ್ವಾಗತಿಸಿದರು. ಜಯಶೀಲ ಕಡೆಕಾರ್ ವರದಿ ವಾಚಿಸಿದರು. ಸುರೇಶ್ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು. ಕಲಾಮಂಡಳಿ ಅಧ್ಯಕ್ಷ ಕೆ. ಧರ್ಮಪಾಲ್ ವಂದಿಸಿದರು.
ಕೃಪೆ :
http://udayavani.com
|
|
|